ರಾಯಚೂರು:ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಪಿಎಸ್ಐ, ಕಾರು ಚಾಲಕ ಸೇರಿ ಐವರಿಗೆ ಗಾಯವಾಗಿದೆ.
ರಾಯಚೂರು ತಾಲೂಕಿನ ಮುರಾನಪುರ ಬಳಿ ಅಪಘಾತ ಸಂಭವಿಸಿದೆ. ಭಾನುವಾರ (ನ.9) ಮಧ್ಯರಾತ್ರಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪಿಎಸ್ಐ ಅರುಣ್ ಕುಮಾರ್ ರಾಥೋಡ್ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ಕಾರು ಚಾಲಕನಿಗೂ ಗಾಯಗಳಾಗಿವೆ.
ಗಾಯಾಳುಗಳನ್ನ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಕಾರ್ಯಕ್ರಮದ ಬಂದೊಬಸ್ತೆಗೆ ಪಿಎಸ್ಐ ತೆರಳಿದ್ದರು ಎನ್ನಲಾಗಿದೆ.
ವಾಪಸ್ ಮರಳುವಾಗ ಕುಟುಂಬದವರೊಂದಿಗೆ ಖಾಸಗಿ ಕಾರಿನಲ್ಲಿ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ವರದಿ: ಗಾರಲ ದಿನ್ನಿ ವೀರನ ಗೌಡ




