ತುರುವೇಕೆರೆ: ತಾಲ್ಲೂಕಿನ ಅತ್ತಿಕುಳ್ಳೆಪಾಳ್ಯದ ಶ್ರೀ ಶನಿದೇವರ ದೇವಾಲಯದಲ್ಲಿಂದು 25 ನೇ ವರ್ಷದ ಶ್ರೀ ಶನೇಶ್ಚರ ಜಯಂತಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಿಗ್ಗೆ 9 ಗಂಟೆಗೆ ಶ್ರೀ ಮಹಾಗಣಪತಿ, ಶ್ರೀ ಶನೇಶ್ಚರ ಸ್ವಾಮಿ ಹಾಗೂ ನವಗ್ರಹ ದೇವತೆಗಳಿಗೆ ಫಲಪಂಚಾಮೃತ ಅಭಿಷೇಕ, ಷೋಡಷೋಪಚಾರ ಪೂಜೆ, ವಿಶೇಷ ಹೂವಿನ ಅಲಂಕಾರ ಮಾಡಿ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಸಹಸ್ರಾರು ಮಂದಿ ಭಕ್ತರು, ಸಾರ್ವಜನಿಕರು ಸ್ವಾಮಿಯ ದರ್ಶನ ಪಡೆದು ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸಂಜೆ 4 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಶನೇಶ್ಚರ ಸ್ವಾಮಿಯವರ ಉತ್ಸವವನ್ನು ವಾದ್ಯವೃಂದ, ನೂರಾರು ಮಹಿಳೆಯರ ಭಜನೆ, ಕೋಲಾಟದೊಂದಿಗೆ ಅದ್ದೂರಿಯಾಗಿ ನಡೆಸಲಾಯಿತು.
ಟ್ರಸ್ಟ್ ಅಧ್ಯಕ್ಷ ಟಿ.ಎನ್.ಮಂಜುನಾಥ್ (ಅಮಾನಿಕೆರೆ) ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ವೈಶಾಖ ಬಹುಳ ಅಮಾವಾಸ್ಯೆಯಂದು ಶ್ರೀ ಶನೇಶ್ಚರ ಜಯಂತಿ ಮಹೋತ್ಸವ ಆಚರಿಸಲಾಗುತ್ತಿದೆ. ಮಹಾಭಿಷೇಕ, ಅನ್ನದಾಸೋಹ ಎಲ್ಲವನ್ನೂ ಏರ್ಪಡಿಸಲಾಗಿದೆ. ವಿಶೇಷವಾಗಿ 2026 ರ ಡಿಸೆಂಬರ್ 07 ರಂದು ಅತ್ತಿಕುಳ್ಳೆಪಾಳ್ಯದಲ್ಲಿ ಶ್ರೀ ಶನೇಶ್ಚರ ಸ್ವಾಮಿ ದೇವಾಲಯದ 25 ನೇ ವರ್ಷದ ಬೆಳ್ಳಿ ಹಬ್ಬದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದ್ದು, ಒಂದು ವಾರಗಳ ಕಾಲ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಅತ್ತಿಕುಳ್ಳೆಪಾಳ್ಯ ಗ್ರಾಮ ಪ್ರವೇಶಿಸುವ ಪ್ರಾರಂಭದಲ್ಲಿ ಶ್ರೀ ಶನಿದೇವರ ದೇವಾಲಯದ ಹೆಬ್ಬಾಗಿಲು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಿ, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರ ಪಟ್ಟಣದಲ್ಲಿ ಹೆಬ್ಬಾಗಿಲಿನ ಕಲ್ಲಿನ ಕೆತ್ತನೆ ಕೆಲಸ ಪ್ರಾರಂಭವಾಗಿದೆ. ಈ ಕಾರ್ಯಕ್ಕೆ ಭಕ್ತಾಧಿಗಳು ತಮ್ಮ ಕೈಲಾದ ಧನ ಸಹಾಯ ಮಾಡಬೇಕೆಂದು ಸಹ ವಿನಂತಿಸಿದರು.
ದೇವರಿಗೆ ಮಹಾಭಿಷೇಕ ಹಾಗೂ ಅನ್ನದಾನ ಸೇವೆಯನ್ನು ರಾಧಾಗೋವಿಂದರಾಜು ಹಾಗೂ ಬಿಜೆಪಿ ನಗರ ಯುವ ಘಟಕದ ಅಧ್ಯಕ್ಷ ರಾಘವೇಂದ್ರ, ಲಕ್ಷ್ಮೀ ದಂಪತಿಗಳು ನಡೆಸಿಕೊಟ್ಟರು. ಮಹೋತ್ಸವಕ್ಕೆ ಸಹಕಾರ ನೀಡಿದ ದಾನಿಗಳನ್ನು ಶ್ರೀ ಶನೇಶ್ಚರ ರಿಲಿಜಿಯಸ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಟ್ರಸ್ಟ್ ಗೌರವಾಧ್ಯಕ್ಷ ಎನ್.ಆರ್. ಜಯರಾಮ್, ಟ್ರಸ್ಟ್ ಅಧ್ಯಕ್ಷ ಟಿ.ಎನ್. ಮಂಜುನಾಥ್ (ಅಮಾನಿಕೆರೆ), ಉಪಾಧ್ಯಕ್ಷ ಮೂಡಲಗಿರಯ್ಯ, ಕಾರ್ಯದರ್ಶಿ ಕುಮಾರ್, ಖಜಾಂಚಿ ಕೃಷ್ಣಮೂರ್ತಿ, ಸಹ ಖಜಾಂಚಿ ಗಂಗಾಧರಯ್ಯ, ಸದಸ್ಯರಾದ ನಂಜೇಗೌಡರು, ಕರೇಗೌಡರು, ಗೋಪಾಲಕೃಷ್ಣೇಗೌಡ, ತಿಮ್ಮಪ್ಪ, ಗಂಗಣ್ಣ, ಬ್ಯಾಟಣ್ಣ, ಪಾರುಪತ್ತೆದಾರ ದೊಡ್ಡಮನೆ ಶಂಕರಣ್ಣ ಸೇರಿದಂತೆ ಅತ್ತಿಕುಳ್ಳೆಪಾಳ್ಯ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಶ್ರೀ ಶನೇಶ್ಚರ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ವರದಿ: ಗಿರೀಶ್ ಕೆ ಭಟ್

