ತುರುವೇಕೆರೆ : ರೈತರಿಂದ ರಾಗಿ ಖರೀದಿ ಮಾಡುವುದನ್ನು ಮೇ 18 ಕ್ಕೆ ಸ್ಥಗಿತಗೊಳಿಸುವುದಾಗಿ ಅಧಿಕಾರಿ ವರ್ಗ ತಿಳಿಸಿದ್ದು, ಖರೀದಿ ದಿನಾಂಕವನ್ನು ವಿಸ್ತರಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 9801 ರೈತರು ನೋಂದಣಿ ಮಾಡಿಸಿದ್ದು, 2.35 ಲಕ್ಷ ಕ್ವಿಂಟಾಲ್ ರಾಗಿ ಖರೀದಿ ಮಾಡಲು ಕೇಂದ್ರ ಸಜ್ಜಾಗಿತ್ತು. ತಾಲ್ಲೂಕಿನ ರೈತರಿಂದ ರಾಗಿ ಖರೀದಿ ಮಾಡಲು ಸರ್ಕಾರದಿಂದ ನೇಮಕಗೊಂಡ ಏಜೆನ್ಸಿಯಾದ ಕರ್ನಾಟಕ ಆಹಾರ ಮತ್ತು ನಾಗರೀಕರ ಸರಬರಾಜು ನಿಗಮವು ಜನವರಿ ತಿಂಗಳಲ್ಲೇ ಖರೀದಿ ಕೇಂದ್ರವನ್ನು ತೆರೆಯಬೇಕಿತ್ತು. ಆದರೆ ಏಜೆನ್ಸಿಯು ಫೆಬ್ರವರಿ 18 ರಿಂದ ಖರೀದಿ ಕೇಂದ್ರ ಪ್ರಾರಂಭಿಸಿದೆ. ಅಂದರೆ 48 ದಿನಗಳ ವಿಳಂಬವಾಗಿ ಖರೀದಿ ಕೇಂದ್ರ ಪ್ರಾರಂಭಿಸಿ ರಾಗಿ ಖರೀದಿ ಆರಂಭಿಸಿದ್ದಾರೆ. ಈಗ ಸರಿಯಾಗಿ ಮೂರು ತಿಂಗಳ ವೇಳೆಗೆ ಖರೀದಿ ಕೇಂದ್ರ ಸ್ಥಗಿತಗೊಳಿಸಲು ಮುಂದಾಗಿರುವುದರಿAದ ಕೇಂದ್ರಕ್ಕೆ ರಾಗಿ ನೀಡಲು ಸಾಕಷ್ಟು ರೈತರಿದ್ದು ಅವರಿಗೆ ಅನ್ಯಾಯವಾಗಲಿದೆ ಎಂದರು.
ನಿಗಮವು ತಾಲೂಕು ಕೇಂದ್ರವಲ್ಲದೆ ಹೋಬಳಿ ಕೇಂದ್ರದಲ್ಲೂ ಖರೀದಿ ಕೇಂದ್ರ ಪ್ರಾರಂಭಿಸಿ ರಾಗಿ ಖರೀದಿ ಮಾಡಿದ್ದರೆ ದಬ್ಬೇಘಟ್ಟ ರಸ್ತೆಯಲ್ಲಿ ಕಳೆದೊಂದು ತಿಂಗಳಿAದ ಖರೀದಿ ಕೇಂದ್ರಕ್ಕೆ ರಾಗಿ ಬಿಡಲು ಬಂದಿದ್ದ ಟ್ರಾಕ್ಟರ್ಗಳ ಸಾಲುಗಳು ನಿಲ್ಲುವುದು ಹಾಗೂ ರೈತರು ಹಗಲಿರುಳು ಮನೆಗೆ ಹೋಗದೆ ಟ್ರಾಕ್ಟರ್ ಮತ್ತು ರಾಗಿ ಕಾಯುತ್ತಾ ತಮ್ಮ ಸರದಿಗಾಗಿ ಎದುರು ನೋಡುತ್ತಾ ನಿಲ್ಲುವುದ ತಪ್ಪುತ್ತಿತ್ತು. ನಿಗಮವು ತನ್ನ ತಪ್ಪನ್ನು ಇಟ್ಟುಕೊಂಡು ಈಗ ದಿಢೀರ್ ರಾಗಿ ಖರೀದಿ ಕೇಂದ್ರವನ್ನು ಮೇ 18 ಕ್ಕೆ ನಿಲ್ಲಿಸಹೊರಟಿದ್ದು, ಸುಮಾರು 43 ಸಾವಿರ ಕ್ವಿಂಟಾಲ್ ನಷ್ಟು ರಾಗಿ ಇನ್ನೂ ಖರೀದಿಗೆ ಉಳಿದಿದೆ. ಇನ್ನುಳಿದ 2 ದಿನದಲ್ಲಿ ಈ ಪ್ರಮಾಣದ ರಾಗಿ ಖರೀದಿ ಮಾಡಲು ಒಂದೇ ಕೇಂದ್ರದಿAದ ಸಾಧ್ಯವಿಲ್ಲ. ಅಲ್ಲದೆ ಮತ್ತಷ್ಟು ರೈತರು ರಾಗಿ ತರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ ಎಂದರು.
ಕೂಡಲೇ ತಹಸೀಲ್ದಾರ್ ಕುಂಇ ಅಹಮದ್ ಅವರು ಈ ವಿಚಾರದ ಬಗ್ಗೆ ಮಧ್ಯಪ್ರವೇಶಿಸಿ ರಾಗಿ ಖರೀದಿ ಕೇಂದ್ರ ಸ್ಥಗಿತಗೊಳಿಸದೆ, ಖರೀದಿ ಅವಧಿಯನ್ನು ವಿಸ್ತರಣೆ ಮಾಡಬೇಕೆಂದ ಅವರು, ಖರೀದಿ ಕೇಂದ್ರ ಸ್ಥಗಿತಗೊಳಿಸಿದರೆ ಭಾರತೀಯ ಕಿಸಾನ್ ಸಂಘದ ವತಿಯಿಂದ ಪ್ರತಿಭಟನೆ ಹಾಗೂ ಕಾನೂನಾತ್ಮಕ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್

