ಕನಕಪುರ: ರಾಮನಗರ ಜಿಲ್ಲೆಯ ಕಣ್ಣು ಎಂದೇ ಪ್ರಸಿದ್ಧಿಯಾದ ಕನಕಪುರದ (Kanakapur) ದೇಗುಲ ಮಠದ ಹಿರಿಯ ಶ್ರೀಗಳಾದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳು (84) ಮಂಗಳವಾರ ಬೆಳಿಗ್ಗೆ ಶಿವೈಕ್ಯರಾಗಿದ್ದು, ಸಿಎಂ ಡಿಕೆ ಶಿವಕುಮಾರ್ (Cm Dk Shivakumar) ಅವರು ಶ್ರೀಗಳ ಅಂತಿಮ (Funeral) ದರ್ಶನ ಪಡೆದಿದ್ದಾರೆ.
ಲಿಂಗೈಕ್ಯರಾದ ಹಿರಿಯ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಕನಕಪುರಕ್ಕೆ ಧಾವಿಸಿದ್ದು, ಶ್ರೀಗಳ ಅಗಲಿಕೆಗೆ ತೀವ್ರ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.
ಮಠದ ಆವರಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ಶ್ರೀಗಳ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಸಲ್ಲಿಸಿದರು.
ತಮ್ಮ ರಾಜಕೀಯ ಯಾನದುದ್ದಕ್ಕೂ ಮಾರ್ಗದರ್ಶಕರಾಗಿದ್ದ ಪರಮಪೂಜ್ಯ ಹಿರಿಯ ಶ್ರೀಗಳ ಪಾರ್ಥಿವ ಶರೀರವನ್ನು ಕಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಣ್ಣೀರು ಹಾಕಿದ ದೃಶ್ಯ ಮಠದಲ್ಲಿದ್ದ ಭಕ್ತರ ಕಣ್ಣುಗಳನ್ನು ತೇವಗೊಳಿಸಿತು.
ಶ್ರೀಗಳ ಅಗಲಿಕೆ ವೈಯಕ್ತಿಕವಾಗಿ ತಮಗೆ ಹಾಗೂ ಇಡೀ ನಾಡಿಗೆ ಭರಿಸಲಾಗದ ದೊಡ್ಡ ನಷ್ಟ ಎಂದು ಸಿಎಂ ಕಂಬನಿ ಮಿಡಿದರು.
ಶ್ರೀಗಳ ಸಮಾಜಮುಖಿ ಸೇವೆ ಹಾಗೂ ಧಾರ್ಮಿಕ ಕೊಡುಗೆಯನ್ನು ಗೌರವಿಸಿ, ಸರ್ಕಾರದ ವತಿಯಿಂದ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ಮುಖ್ಯಮಂತ್ರಿಗಳೊಂದಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಕೂಡ ದೇಗುಲ ಮಠಕ್ಕೆ ಭೇಟಿ ನೀಡಿ ಶ್ರೀಗಳ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ದಶಕಗಳ ಕಾಲ ಈ ಭಾಗದಲ್ಲಿ ಅನ್ನದಾಸೋಹ ಹಾಗೂ ಜ್ಞಾನದಾಸೋಹ ನಡೆಸಿದ್ದ ಮಹಾತ್ಮರ ಅಂತಿಮ ದರ್ಶನ ಪಡೆಯಲು ಕನಕಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಮಠದ ಆವರಣಕ್ಕೆ ಶೋಕತಪ್ತರಾಗಿ ಸಾಲಾಗಿ ಆಗಮಿಸುತ್ತಿದ್ದಾರೆ.


