ನವದೆಹಲಿ: ಅರ್ಹ ಫಲಾನುಭವಿಗಳಿಗೆ ಸುಮಾರು ಮೂರು ಕೋಟಿ ಹೆಚ್ಚುವರಿ ಪಡಿತರ ಚೀಟಿಗಳನ್ನು ವಿತರಿಸಲು ಕೇಂದ್ರ ಸರ್ಕಾರ ಅನುಮತಿಸಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಸ್ಮಾರ್ಟ್ ವೇರ್ ಹೌಸಿಂಗ್ ವ್ಯವಸ್ಥೆ ಉದ್ಘಾಟಿಸಿ ಅವರು ಮಾತನಾಡಿ, ಕೆಲವು ರಾಜ್ಯ ಸರ್ಕಾರಗಳು 2.21 ಕೋಟಿ ಅನರ್ಹ ಪಡಿತರ ಚೀಟಿಗಳನ್ನು ಪಿಡಿಎಸ್ ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆ ನಡೆಸುತ್ತಿದ್ದು, ಇದಾದ ಬಳಿಕ ಅರ್ಹ ಫಲಾನುಭವಿಗಳಿಗೆ ಸುಮಾರು ಮೂರು ಕೋಟಿ ಹೆಚ್ಚುವರಿ ಪಡಿತರ ಚೀಟಿಗಳನ್ನು ವಿತರಿಸಲು ಕೇಂದ್ರ ಸರ್ಕಾರ ಅನುಮತಿಸಿದೆ ಎಂದು ತಿಳಿಸಿದ್ದಾರೆ.
ಆಹಾರ ಸಚಿವಾಲಯವು ಮೃತಪಟ್ಟ ವ್ಯಕ್ತಿಗಳು, ಆದಾಯ ತೆರಿಗೆ ಪಾವತಿದಾರರು, ನಾಲ್ಕು ಚಕ್ರಗಳ ವಾಹನಗಳ ಮಾಲೀಕರು ಸೇರಿದಂತೆ 8.51 ಕೋಟಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯನ್ನು ರಾಜ್ಯಗಳಿಗೆ ಕಳುಹಿಸಿದ್ದು, ಈ 8.51 ಕೋಟಿ ಪಡಿತರ ಚೀಟಿಗಳಲ್ಲಿ ರಾಜ್ಯ ಸರ್ಕಾರಗಳು ತಮ್ಮದೇ ಆದ ಮಾನದಂಡಗಳನ್ನು ಅನುಸರಿಸಿ ಅನರ್ಹರ 2.21 ಕೋಟಿ ಪಡಿತರ ಚೀಟಿಗಳನ್ನು ಹಿಂತೆಗೆದುಕೊಂಡಿವೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಡಿಜಿಟಲೀಕರಣದಿಂದ ಈ ಕ್ರಮ ಸಾಧ್ಯವಾಗಿದೆ. ಅರ್ಹ ಫಲಾನುಭವಿಗಳನ್ನು ಸೇರಿಸಲು ರಾಜ್ಯಗಳಿಗೆ ಅನುಮತಿ ನೀಡಲಾಗಿದೆ. ವಿವಿಧ ರಾಜ್ಯ ಸರ್ಕಾರಗಳು ಸುಮಾರು ಮೂರು ಕೋಟಿ ಹೆಚ್ಚಿನ ಪಡಿತರ ಚೀಟಿಗಳನ್ನು ಅರ್ಹರಿಗೆ ನೀಡಬಹುದು ಎಂದು ಹೇಳಿದ್ದಾರೆ.


