ನವದೆಹಲಿ: ನೇಪಾಳದಲ್ಲಿ ಭಾರಿ ಪ್ರವಾಹ ಮತ್ತು ಭೂಕುಸಿತದ ಆತಂಕ ಮುಂದುವರಿದಿರುವ ನಡುವೆಯೇ, ದರ್ಚುಲಾ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ ಚೌಲಾನಿ ನದಿಯ ಹರಿವಿಗೆ ಭಾಗಶಃ ಅಡ್ಡಿಯಾಗಿದೆ. ಇದರಿಂದ ನದಿಯ ಕೆಳಭಾಗದಲ್ಲಿ ವಾಸಿಸುವ ಜನರಲ್ಲಿ ದಿಢೀರ್ ಪ್ರವಾಹದ ಆತಂಕ ಹೆಚ್ಚಾಗಿದೆ.
ಆಪಿ ಹಿಮಾಲ್ ಗ್ರಾಮೀಣ ಪುರಸಭೆ ವ್ಯಾಪ್ತಿಯ ಭಟ್ಟಾರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಅಪಾರ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ನದಿಗೆ ಕುಸಿದು ಬಿದ್ದಿವೆ. ಪರಿಣಾಮವಾಗಿ ನದಿಯ ನೀರಿನ ಹರಿವು ಅಸ್ತವ್ಯಸ್ತಗೊಂಡಿದೆ.
ಈ ಕುರಿತು ದರ್ಚುಲಾ ಜಿಲ್ಲಾ ಆಡಳಿತ ಕಚೇರಿ ಎಚ್ಚರಿಕೆ ನೀಡಿದ್ದು, ಮತ್ತಷ್ಟು ಭೂಕುಸಿತ ಸಂಭವಿಸಿದರೆ ನದಿಯ ಹರಿವು ಸಂಪೂರ್ಣವಾಗಿ ತಡೆಯಲ್ಪಡುವ ಸಾಧ್ಯತೆ ಇದೆ. ಇದರಿಂದ ನೀರು ಏಕಾಏಕಿ ಹರಿದುಬಂದು ಕೆಳಭಾಗದಲ್ಲಿ ಭೀಕರ ಪ್ರವಾಹ ಉಂಟಾಗುವ ಅಪಾಯವಿದೆ ಎಂದು ತಿಳಿಸಿದೆ.
ನದಿಯ ದಡದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಅಪಾಯದ ಪ್ರದೇಶಗಳಲ್ಲಿರುವ ಜನರಿಗೆ ಮಾಹಿತಿ ನೀಡಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.


