ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಖಂಡಿಸಿ ಹಾಗೂ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಪರ ಹಿರಿಯ ಹೋರಾಟಗಾರ ಹಾಗೂ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ (ಅ.13) ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಆದರೆ, ಬಹುತೇಕ ಇತರೆ ಕನ್ನಡಪರ ಸಂಘಟನೆಗಳು ಈ ಬಂದ್ಗೆ ಬೆಂಬಲ ನೀಡಿಲ್ಲ. ಹೀಗಾಗಿ ಬಂದ್ ವಿಫಲವಾಗುವ ಸಾಧ್ಯತೆಗಳು ಹೆಚ್ಚಿವೆ.
ರಾಜ್ಯದಲ್ಲಿ ಸದ್ಯ ಮುಂಗಾರು ಚುರುಕುಗೊಂಡಿರುವ ಕಾರಣ ಸಾರ್ವಜನಿಕರು, ರೈತರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳ ಹಿತದೃಷ್ಟಿಯಿಂದ ಈ ಹಿಂದೆ ರಾಜ್ಯ ಬಂದ್ಗೆ ಬೆಂಬಲ ಘೋಷಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳಾದ ಪ್ರವೀಣ್ ಶೆಟ್ಟಿ ಹಾಗೂ ಶಿವರಾಮೇಗೌಡ ಬಣಗಳು ಬಂದ್ನಿಂದ ದೂರ ಉಳಿದಿವೆ.
ಬೆಂಗಳೂರು ಹೋಟೆಲ್, ಖಾಸಗಿ ಸಾರಿಗೆ, ಶಾಲಾ ಒಕ್ಕೂಟಗಳು, ಆಟೋ, ಕ್ಯಾಬ್ ಮತ್ತಿತರ ಸಂಘಟನೆಗಳು ಕೇವಲ ನೈತಿಕವಾಗಿ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ರಾಜ್ಯ ಬಂದ್ಗೆ ಒಮ್ಮತ ಮತ್ತು ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತಿದ್ದು. ಕೆಲವೇ ಸಂಘಟನೆಗಳು ಮಾತ್ರವೇ ವಾಟಾಳ್ ಪರವಾಗಿವೆ.
ಹೀಗಾಗಿ ಶುಕ್ರವಾರ ಬಂದ್ ನಡೆದರೂ ಸರ್ಕಾರಿ ಬಸ್, ಮೆಟ್ರೋ ಸಂಚಾರ, ಕಚೇರಿಗಳು, ಆಸ್ಪತ್ರೆ, ಶಾಲಾ-ಕಾಲೇಜುಗಳು, ಬ್ಯಾಂಕ್, ಚಲನಚಿತ್ರಮಂದಿರ, ವಾಣಿಜ್ಯ ಹಾಗೂ ಸಣ್ಣಪುಟ್ಟ ವ್ಯಾಪಾರ ಚಟುವಟಿಕೆ ಸೇರಿ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಜನಜೀವನ ಎಂದಿನಂತೆ ಯಥಾಸ್ಥಿತಿಯಲ್ಲಿರಲಿದ್ದು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ.
ಬೆಳಗ್ಗೆ 11ಕ್ಕೆ ಟೌನ್ಹಾಲ್ನಿಂದ ಮೆರವಣಿಗೆ:
ಈ ನಡುವೆ, ಯಾರೇ ಬೆಂಬಲ ನೀಡಿದರೂ, ನೀಡದಿದ್ದರೂ ರಾಜ್ಯಬಂದ್ ನಡೆಸುವುದಾಗಿ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾದ ಬಂದ್ ನಡೆಯಲಿವೆ.
ಬೆಂಗಳೂರಿನಲ್ಲಿ ಬೆಳಗ್ಗೆ 11 ಗಂಟೆಗೆ ನಗರದ ಟೌನ್ ಹಾಲ್ನಿಂದ ಫ್ರೀಡಂಪಾರ್ಕವರೆಗೂ ಮೆರವಣಿಗೆ ನಡೆಸಲಾಗುವುದು. ಕೈಗೊಂಡಿರುವ ರಾಜ್ಯ ಮುಷ್ಕರ ಕೇವಲ ಕಾವೇರಿ ನೀರು ಹಂಚಿಕೆಗೆ ಮಾತ್ರ ಸೀಮಿತವಲ್ಲ. ಬದಲಾಗಿ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ. ಈ ನಿಟ್ಟಿನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.


