ಬೆಳಗಾವಿ: ಹೆತ್ತ ತಾಯಿಗಿಂತ ದೊಡ್ಡ ದೇವರಿಲ್ಲ ಎನ್ನುವ ಕಾಲದಲ್ಲಿ, ಜನ್ಮ ನೀಡಿದ ತಾಯಿಯನ್ನೇ ಅನಾಥೆಯಂತೆ ನಿರ್ಜನ ಪ್ರದೇಶದಲ್ಲಿ ಬಿಟ್ಟು ಮಗನೊಬ್ಬ ಪರಾರಿಯಾಗಿರುವ ಕರುಳು ಹಿಂಡುವ ಘಟನೆ ಬೆಳಗಾವಿ (Belagavi Shocker) ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ತಾಯಿಯನ್ನು ಮಗನೇ ರಾತ್ರೋರಾತ್ರಿ ಕಾಡಿಗೆ ತಂದು ಬಿಟ್ಟು ಹೋಗುವ ಮೂಲಕ ಮಾನವೀಯತೆಯನ್ನೇ ಮರೆತು ಕ್ರೌರ್ಯ ಮೆರೆದಿದ್ದಾನೆ.
ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಕಮಲಮ್ಮ ಕಟ್ಟಿ ಎಂಬುವವರೇ ಈ ದುರ್ದೈವಿ ವೃದ್ಧೆ. ಇವರ ಸ್ವಂತ ಮಗ ಸಂತೋಷ ಕಟ್ಟಿ ಎಂಬಾತನೇ ಈ ಅಮಾನವೀಯ ಕೃತ್ಯ ಎಸಗಿದ ಪಾಪಿಯಾಗಿದ್ದಾನೆ.
ನಿನ್ನೆ ರಾತ್ರಿ ಸುಮಾರು 10 ಗಂಟೆಯ ಕತ್ತಲಲ್ಲಿ ಕಮಲಮ್ಮ ಅವರನ್ನು ಮುನವಳ್ಳಿ ಜಲಾಶಯದ ಸಮೀಪವಿರುವ ನಿರ್ಜನ ಗುಡ್ಡಗಾಡು ಪ್ರದೇಶಕ್ಕೆ ಕರೆತಂದಿರುವ ಸಂತೋಷ್, ಯಾರೂ ಇಲ್ಲದ್ದನ್ನು ನೋಡಿ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಮುಂಜಾನೆ ಗುಡ್ಡದ ಬಳಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧೆ, ತನ್ನ ನೋವನ್ನು ನೆನೆದು ಕಣ್ಣೀರಿಡುತ್ತಾ ದಾರಿಹೋಕರ ಮುಂದೆ ಅಳಲು ತೋಡಿಕೊಂಡಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.
ವಿಶೇಷವೆಂದರೆ, ತಾಯಿಯನ್ನು ಅನಾಥೆಯನ್ನಾಗಿಸಿದ ಸಂತೋಷ ಕಟ್ಟಿ ಬೇರೆಲ್ಲೂ ಅಲ್ಲ, ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ಕೆಎಸ್ಆರ್ಟಿಸಿಯ (KSRTC) ಸಂಕೇಶ್ವರ ಡಿಪೋದಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಸಮಾಜದಲ್ಲಿ ಜವಾಬ್ದಾರಿಯುತ ಕೆಲಸದಲ್ಲಿರುವ ವ್ಯಕ್ತಿಯೊಬ್ಬನೇ ಹೆತ್ತ ತಾಯಿಗೆ ಈ ಗತಿ ತಂದಿರುವುದನ್ನು ಕೇಳಿ ಮುನವಳ್ಳಿಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಸ್ಥಳೀಯರೇ ಮಾನವೀಯತೆಯಿಂದ ಮುಂದು ಬಂದು ವೃದ್ಧೆಗೆ ಕುಡಿಯಲು ನೀರು, ಆಹಾರ ನೀಡಿ ತಾತ್ಕಾಲಿಕವಾಗಿ ಆರೈಕೆ ಮಾಡಿದ್ದಾರೆ. ವಯಸ್ಸಾದ ತಾಯಿಯನ್ನು ಸಾಕೋದು ಬೇಡವೆಂದು ಕಾಡಿಗೆ ತಳ್ಳಿದ ಮಗನ ವಿರುದ್ಧ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಅಸಹಾಯಕ ವೃದ್ಧೆಗೆ ಸರ್ಕಾರದಿಂದ ಸೂಕ್ತ ಆಶ್ರಯ ಹಾಗೂ ನೆರವು ಕೊಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

