ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿ ಕೋಡಿನಾಗಸಂದ್ರ ಟಿ.ಬಿ.ಕ್ರಾಸ್ ವೃತ್ತದಲ್ಲಿರುವ ಶ್ರೀ ವಿನಾಯಕ ಮಾರುತಿ ದೇವರ ಪ್ರತಿಷ್ಟಾಪನೆ, ವಿಮಾನಗೋಪುರ, ಕಳಸ ಸ್ಥಾಪನೆ ಹಾಗೂ ಶ್ರೀ ಮಾರುತಿ ಸ್ವಾಮಿಯವರ 31 ಅಡಿ ಎತ್ತರದ ಪ್ರತಿಮೆ ಅನಾವರಣದ ಉದ್ಘಾಟನಾ ಕಾರ್ಯಕ್ರಮವನ್ನು ಮೇ 07 ಮತ್ತು 08 ರಂದು ಆಯೋಜಿಸಲಾಗಿದೆ ಎಂದು ಶ್ರೀ ವಿನಾಯಕ ಮಾರುತಿ ದೇವಾಲಯ ಸಮಿತಿ ಅಧ್ಯಕ್ಷ ಎನ್. ಲೋಕೇಶ್, ಕಾರ್ಯದರ್ಶಿ ಜಿ.ಡಿ.ಗಂಗಾಧರಯ್ಯ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀ ಮಾರುತಿ ದೇವಾಲಯವು ಬಹಳ ವರ್ಷಗಳ ಹಳೆಯ ದೇವಸ್ಥಾನವಾಗಿದೆ. ದೇವಾಲಯವನ್ನು ಹೊಸದಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಸಮಿತಿ ರಚಿಸಿಕೊಂಡು ಭಕ್ತಾಧಿಗಳು, ದಾನಿಗಳ ಸಹಕಾರದೊಂದಿಗೆ ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಪ್ರತಿಷ್ಟಾಪನೆ, ವಿಮಾನಗೋಪುರ, ಕಳಸ ಸ್ಥಾಪನೆ ಹಾಗೂ ಶ್ರೀ ಮಾರುತಿ ಸ್ವಾಮಿಯವರ 31 ಅಡಿ ಎತ್ತರದ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮೇ 07 ಮತ್ತು 08 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾರುತಿಯ ಕೃಪೆಗೆ ಪಾತ್ರರಾಗಬೇಕೆಂದರು.
ಸಮಿತಿಯ ಉಪಾಧ್ಯಕ್ಷ ರಘು ಮಾತನಾಡಿ, ಮೇ 07 ಮತ್ತು 08 ರ ಶ್ರೀ ವಿನಾಯಕ ಮಾರುತಿ ದೇವರ ಪ್ರತಿಷ್ಟಾಪನಾ ಕಾರ್ಯಕ್ರಮ ಪೂರ್ಣ ಪ್ರಮಾಣದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ದೇವರ ಕಾರ್ಯಕ್ರಮದ ವಿಚಾರದಲ್ಲಿ ಕೆಲವರು ಅನಗತ್ಯ ರಾಜಕೀಯ ತಂದು ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದರು. ಆದರೆ ಸಮಿತಿಯ ಪದಾಧಿಕಾರಿಗಳಲ್ಲಿ, ಭಕ್ತಾಧಿಗಳಲ್ಲಿ ಯಾವುದೇ ಗೊಂದಲವಿಲ್ಲ. ದೇವಸ್ಥಾನದ ಉದ್ಘಾಟನೆ, ಶ್ರೀ ಮಾರುತಿ ದೇವರ ಬೃಹತ್ ಪ್ರತಿಮೆ ಎಲ್ಲರ ಸಹಕಾರದೊಂದಿಗೆ ನಿರ್ವಿಘ್ನವಾಗಿ ನೆರವೇರಲಿದೆ ಎಂದರು.
ಕುಂಭಾಭಿಷೇಕವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ. ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಧಾರ್ಮಿಕ ಸಭೆಯಲ್ಲಿ ಆರ್ಶೀವಚನ ನೀಡಲಿದ್ದಾರೆ. ಮೈಸೂರು ಮಹಾಸಂಸ್ಥಾನದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ವಿ.ಸೋಮಣ್ಣ ಸಭೆಯನ್ನು ಉದ್ಘಾಟಿಸಲಿದ್ದಾರೆ. ಶಾಸಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯಸಭಾ ಸದಸ್ಯ ಜಗ್ಗೇಶ್, ನಿಕಟಪೂರ್ವ ಶಾಸಕ ಮಸಾಲಾ ಜಯರಾಮ್, ಮಾಜಿ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಮೇಶ್ ಗೌಡ, ಸರ್ಜಾಪುರದ ಶಾಂತಮ್ಮ ಲಕ್ಕಣ್ಣಗೌಡರು ಸೇರಿದಂತೆ ನೂರಾರು ಗಣ್ಯರು ಆಗಮಿಸಲಿದ್ದಾರೆ. ಮೇ 07 ಮತ್ತು .08 ರಂದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮೇ 08 ರಂದು ಸಂಜೆ 7 ಗಂಟೆಗೆ ಕರ್ನಾಟಕ ರಾಜ್ಯ ಕಲಾವಿದರ ಹಿತರಕ್ಷಣಾ ಸಂಘದ ವತಿಯಿಂದ ಸಂಪೂರ್ಣ ರಾಮಾಯಣ ನಾಟಕವನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹನುಮಂತರಾಜು, ಖಜಾಂಚಿ ಚಂದ್ರಶೇಖರಯ್ಯ, ಸದಸ್ಯರಾದ ನಂಜುAಡಯ್ಯ, ಮಂಜುನಾಥ್, ನಾಗೇಶ್, ಸ್ವಾಮಿ, ಶಿವಣ್ಣ, ಲೋಕೇಶ್, ಶಿವಣ್ಣ, ರಾಮಚಂದ್ರ, ಗ್ರಾಪಂ ಮಾಜಿ ಸದಸ್ಯ ಮುರುಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್

