ವಿಜಯನಗರ ಜಿಲ್ಲೆ : ತಾಲ್ಲೂಕಿನ ಗುಳೇದಹಟ್ಟಿ ತಾಂಡಾದಲ್ಲಿ ನವವಿವಾಹಿತೆ ಕೌಶಲ್ಯ (25) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, 'ನನ್ನ ಕಣ್ಣೆದುರೇ ಮಗಳ ಮೇಲೆ ಹಲ್ಲೆ ಮಾಡಿ ನೇಣು ಹಾಕಲಾಗಿದೆ' ಎಂದು ಆರೋಪಿಸಿ ತಾಯಿ ಜಯಬಾಯಿ ಶನಿವಾರ ಅರಸೀಕೆರೆ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು ಕೋಣನಕುಂಟೆ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಶಿವಕುಮಾರ್ ನಾಯ್ಕ್ (ಪತಿ), ಸಚಿನ್ (ಮೈದುನ), ಸಕ್ರ್ಯಾನಾಯ್ಕ (ಮಾವ), ಶಾರದಾಬಾಯಿ (ಅತ್ತೆ) ಅವರಿಂದ ಈ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಆರೋಪಿಗಳೆಲ್ಲ ತಲೆಮರೆಸಿಕೊಂಡಿದ್ದಾರೆ.
ಕಳೆದ ಮಾರ್ಚ್ 15ರಂದು ಕೌಶಲ್ಯ-ಶಿವಕುಮಾರ್ ಮದುವೆ ನಡೆದಿತ್ತು. ಮದುವೆ ವೇಳೆ 13 ತೊಲೆ ಚಿನ್ನ ಹಾಗೂ ₹3.50 ಲಕ್ಷ ನಗದನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು.
ಆರಂಭದಲ್ಲಿ ದಂಪತಿ ಚೆನ್ನಾಗಿದ್ದರು. ಈಚೆಗೆ ಹೆಂಡತಿಯನ್ನು ಬೆಂಗಳೂರಿನಿಂದ ಕರೆತಂದು ಗುಳೇದಹಟ್ಟಿ ತಾಂಡಾದಲ್ಲಿ ಬಿಟ್ಟು ಹೋಗಿದ್ದ ಶಿವಕುಮಾರ್, ಬಳಿಕ ಕುಟುಂಬದ ಸದಸ್ಯರೊಂದಿಗೆ ಸೇರಿ ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಹಾಗೂ ಶೀಲ ಶಂಕಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
'ಜೂನ್ 19ರಂದು ರಜೆಯ ಮೇಲೆ ಬೆಂಗಳೂರಿನಿಂದ ಬಂದಿದ್ದ ಶಿವಕುಮಾರ್ ಕೌಶಲ್ಯಳಿಗೆ ಕೊಲೆ ಬೆದರಿಕೆ ಹಾಕಿದ್ದ. ಜೂನ್ 20ರಂದು ಬೆಳಿಗ್ಗೆ 10.38ರ ಸುಮಾರಿಗೆ ಕೌಶಲ್ಯ ನನಗೆ ಫೋನ್ ಮಾಡಿ, ಪತಿ ಮತ್ತು ಆತನ ಮನೆಯವರು ನನ್ನ ಶೀಲ ಶಂಕಿಸಿ ತೀವ್ರವಾಗಿ ಹೊಡೆಯುತ್ತಿದ್ದಾರೆ ಎಂದು ಹೇಳಿದ್ದಳು.
ಮಗಳ ಆಕ್ರಂದನ ಕೇಳಿ ಗಾಬರಿಯಾಗಿ ನಾನು ಗುಳೇದಹಟ್ಟಿ ತಾಂಡಾಕ್ಕೆ ಧಾವಿಸಿದೆ. ಮಧ್ಯಾಹ್ನ 12.30ರ ಸುಮಾರಿಗೆ ಮಗಳ ಮನೆಗೆ ತಲುಪಿದೆ.
ಆಗ ಪತಿ ಶಿವಕುಮಾರ್ ಸೇರಿದಂತೆ ಇಡೀ ಕುಟುಂಬಸ್ಥರು ಮಗಳನ್ನು ನೇಣು ಬಿಗಿದು ಕೊಲೆ ಮಾಡುತ್ತಿರುವ ದೃಶ್ಯವನ್ನು ಕಣ್ಣಾರೆ ಕಂಡೆ' ಎಂದು ಜಯಬಾಯಿ ದೂರಿನಲ್ಲಿ ತಿಳಿಸಿದ್ದಾರೆ.


