ಬೆಳಗಾವಿ: ಜಿಲ್ಲೆಯ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ನೈಸರ್ಗಿಕ ಸಂಪನ್ಮೂಲಗಳ ಲೂಟಿ ಮಿತಿಮೀರಿದ್ದು, ಮರಳು ಮಾಫಿಯಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಅಧಿಕಾರಿಗಳ ಕಣ್ಮುಂದೆಯೇ ಹಗಲು-ರಾತ್ರಿ ಎನ್ನದೆ ಭೂಮಿಯ ಒಡಲನ್ನು ಬಗೆಯಲಾಗುತ್ತಿದ್ದರೂ, ಜಿಲ್ಲಾಡಳಿತ ಮಾತ್ರ ಕುಂಭಕರ್ಣನ ನಿದ್ದೆಗೆ ಜಾರಿದಂತಿದೆ.
ಹೈಟೆಕ್ ಯಂತ್ರಗಳ ಬಳಸಿ ಲೂಟಿ
ನಂದಿಹಳ್ಳಿಯ ಹಳ್ಳ-ಕೊಳ್ಳಗಳಲ್ಲಿ ಮರಳು ಕಳ್ಳತನ ಮಾಡಲು ಮಾಫಿಯಾ ಹೈಟೆಕ್ ದಾರಿಗಳನ್ನು ಕಂಡುಕೊಂಡಿದೆ. ಬೃಹತ್ ಪಂಪ್ಸೆಟ್ಗಳನ್ನು ಬಳಸಿ ನೀರನ್ನು ಹೊರಹಾಕಲಾಗುತ್ತಿದೆ. ತದನಂತರ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳ ಮೂಲಕ ಭೂಮಿಯನ್ನು ಆಳವಾಗಿ ಅಗೆದು ಟ್ರ್ಯಾಕ್ಟರ್ ಮತ್ತು ಲಾರಿಗಳಿಗೆ ಮರಳು ತುಂಬಿಸಲಾಗುತ್ತಿದೆ. ಈ ಭೀಕರ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪ್ರಕೃತಿಯ ನಾಶ ಕಣ್ಣೆದುರೇ ನಡೆಯುತ್ತಿದ್ದರೂ ಯಾರೂ ಪ್ರಶ್ನಿಸದಂತಾಗಿದೆ.
ಅಧಿಕಾರಿಗಳ ಮೌನವೇ ಆಶೀರ್ವಾದ?
ಇಷ್ಟೆಲ್ಲಾ ಬಹಿರಂಗವಾಗಿ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಾಗಲಿ ಅಥವಾ ಸ್ಥಳೀಯ ಪೊಲೀಸರಾಗಲಿ ಇತ್ತ ಸುಳಿಯದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
"ಬಡವ ತನ್ನ ಮನೆ ಕಟ್ಟಲು ಒಂದು ಚೀಲ ಮರಳು ತರಬೇಕೆಂದರೆ ಕಾನೂನು ಪಾಲಿಸುವಂತೆ ತಾಕೀತು ಮಾಡುವ ಅಧಿಕಾರಿಗಳು, ಸಾವಿರಾರು ಟನ್ ಮರಳು ಲೂಟಿ ಮಾಡುತ್ತಿರುವ ಮಾಫಿಯಾದವರ ಮುಂದೆ ಮೌನ ವಹಿಸಿರುವುದೇಕೆ?" ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಈ ಅಕ್ರಮ ದಂಧೆಯ ಹಿಂದೆ ಪ್ರಭಾವಿ ರಾಜಕಾರಣಿಗಳ ಅಥವಾ ಅಧಿಕಾರಿಗಳ ಹಸ್ತವಿದೆಯೇ ಎಂಬ ಶಂಕೆ ಬಲವಾಗಿ ವ್ಯಕ್ತವಾಗುತ್ತಿದೆ. ಅಧಿಕಾರಿಗಳ ಈ ನಿಗೂಢ ಮೌನವೇ ಲೂಟಿಕೋರರಿಗೆ 'ರಕ್ಷಾ ಕವಚ'ವಾಗಿ ಪರಿಣಮಿಸಿದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ರೈತರ ಭೂಮಿ ಬರಡಾಗುವ ಭೀತಿ ಮರಳು ಲೂಟಿಯಿಂದಾಗಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ನಂದಿಹಳ್ಳಿಯ ಫಲವತ್ತಾದ ರೈತರ ಭೂಮಿ ಬರಡಾಗುವ ಸಂಶಯವಿದೆ. ಪರಿಸರ ಸಮತೋಲನ ತಪ್ಪುತ್ತಿದ್ದು, ಮಳೆಗಾಲದಲ್ಲಿ ಕೃತಕ ಪ್ರವಾಹ ಉಂಟಾಗುವ ಭೀತಿಯೂ ಎದುರಾಗಿದೆ.
ಜಿಲ್ಲಾಧಿಕಾರಿಗಳ ಗಮನಕ್ಕೆ...
ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಅಕ್ರಮ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ. ಈ ದಂಧೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳಿಗೆ 'ಚಳಿ' ಬಿಡಿಸಬೇಕಿದೆ ಮತ್ತು ಮರಳು ಲೂಟಿಕೋರರನ್ನು ಜೈಲಿಗಟ್ಟಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ವರದಿ :ಸದಾಶಿವಾಮಹಾಂತೇಶ್ ಎಸ್ ಹುಲಿಕಟ್ಟಿ

