ತುರುವೇಕೆರೆ: ತುರುವೇಕೆರೆ ತಾಲ್ಲೂಕನ್ನು ರಾಜ್ಯ ಸರ್ಕಾರ ತೀವ್ರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದೆ.
ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಅಧಿಕೃತವಾಗಿ ಘೋಷಿಸಿದೆ. ಇದರಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ಸಹ ಸೇರಿದೆ. ಅಲ್ಲಿಗೆ "ತುರುವೇಕೆರೆ ತಾಲ್ಲೂಕನ್ನು" ಸರ್ಕಾರ ಅಧಿಕೃತವಾಗಿ ತೀವ್ರ ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಿದೆ.
ರಾಜ್ಯದ ಒಟ್ಟು 190 ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಇದರಲ್ಲಿ 13 ತಾಲೂಕುಗಳಲ್ಲಿ ಅತ್ಯಂತ ಭೀಕರ ಮಳೆ ಕೊರತೆ ದಾಖಲಾಗಿದೆ. ಸದ್ಯ ಮೊದಲ ಹಂತದಲ್ಲಿ ಪರಿಸ್ಥಿತಿ ಗಂಭೀರವಾಗಿರುವ 89 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಿ ಒಟ್ಟು 101 ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಬರ ಪರಿಹಾರ ಮತ್ತು ಮುನ್ನೆಚ್ಚರಿಕಾ ಕ್ರಮಗಳಿಗಾಗಿ ಸರ್ಕಾರ ವಿವಿಧ ಹಂತಗಳಲ್ಲಿ ಒಟ್ಟು ₹635 ಕೋಟಿ ಅನುದಾನ ಒದಗಿಸಿದೆ.
ಕುಡಿಯುವ ನೀರಿನ ಪೂರೈಕೆಗಾಗಿ: ಜಿಲ್ಲಾಧಿಕಾರಿಗಳಿಗೆ ₹117 ಕೋಟಿ ಬಿಡುಗಡೆ, ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ: 189 ಕೋಟಿ ಹಂಚಿಕೆ ಮಾಡಿದ್ದು,ಡಿಸಿಗಳ ಪಿಡಿ (PD) ಖಾತೆಯಲ್ಲಿ: 329 ಕೋಟಿ ಅನುದಾನ ಲಭ್ಯವಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಕಿಟ್ಗಳನ್ನು ವಿತರಿಸಲಾಗುತ್ತಿದೆ.
ತುರುವೇಕೆರೆ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರಿಗೆ ಬೆಳೆ ನಷ್ಟ ಪರಿಹಾರ, ಸಾಲ ಮರುಪಾವತಿಗೆ ಸಡಿಲಿಕೆ, ಜಾನುವಾರುಗಳಿಗೆ ಗೋಶಾಲೆ, ಕುಡಿಯುವ ನೀರು, ಮೇವಿನ ಸೌಲಭ್ಯದಂತಹ ಪರಿಹಾರ ಕ್ರಮ ದೊರೆಯಬಹುದೆಂದು ನಿರೀಕ್ಷಿಸಲಾಗಿದೆ.
ವರದಿ: ಗಿರೀಶ್ ಕೆ ಭಟ್


