ಬೆಳಗಾವಿ : ಮಹಿಳೆಯೊಬ್ಬರನ್ನು ಸ್ವತಃ ಗಂಡ, ಮಾವ ಹಾಗೂ ಅತ್ತೆ ಸಂಚು ಹೂಡಿ ಕೊಲೆ ಮಾಡಿದ್ದಲ್ಲದೇ ಅದನ್ನು ಅಪಘಾತವೆಂಬಂತೆ ಬಿಂಬಿಸಲು ಯತ್ನಿಸಿ ತಗುಲಿಕೊಂಡಿರುವ ಘಟನೆ ಬೆಳಗಾವಿಯ ಅಥಣಿಯ ಗಡಿಯಲ್ಲಿ ನಡೆದಿದೆ.
ಮಲಬಾದ ಗ್ರಾಮದ ರೇಣುಕಾ ಸಂತೋಷ ಹೊನಕಾಂಡೆ (27) ಮೃತ ದುರ್ದೈವಿ. ಪ್ರಕರಣದ ಆರೋಪಿಗಳಾದ ಕಾಮಣ್ಣ ಹೊನಕಾಂಡೆ, ಜಯಶ್ರೀಹೊನಕಾಂಡೆ ಮತ್ತು ಅವರ ಪುತ್ರ ಸಂತೋಷ ಹೊನಕಾಂಡೆ ಅವರನ್ನು ಬಂಧಿಸಲಾಗಿದೆ.
ತಮ್ಮ ಸೊಸೆ ಸಾಕಷ್ಟು ವರದಕ್ಷಿಣೆ ತರಲಿಲ್ಲವೆಂದು ಕಾಮಣ್ಣ ಮತ್ತು ಜಯಶ್ರೀ ದಂಪತಿಗಳು ಆಕೆಯ ಮೇಲೆ ವಿಷ ಕಾರುತ್ತಿದ್ದರು. ಮೇ 17 ರಂದು ಕಾಮಣ್ಣ ಮತ್ತು ಜಯಶ್ರೀ ದಂಪತಿಗಳು ಸೊಸೆಯನ್ನು ಬೈಕ್ ಮೇಲೆ ಕರೆದೊಯ್ದಿದ್ದರು.
ಮಲಬಾದಿ ಗ್ರಾಮದ ಬಳಿ ಅವಳನ್ನು ನೆಲಕ್ಕಿ ಕೆಡವಿ ತಲೆಗೆ ಕಲ್ಲಿನಿಂದ ಜಜ್ಜಿ, ಕುತ್ತಿಗೆಗೆ ಸೀರೆ ಬಿಗಿದು ಹತ್ಯೆಗೈದಿದ್ದರು. ಬಳಿಕ ಆಕೆಯ ಸೀರೆ ಬೈಕ್ ನ ಚಕ್ರಕ್ಕೆ ಸಿಲುಕಿರುವಂತೆ ಬಿಂಬಿಸಲು ಯತ್ನಿಸಿದ್ದ ದಂಪತಿಗಳು ಆಕೆಯ ಶವವನ್ನು ಬೈಕಿಗೆ ಕಟ್ಟಿ ಸುಮಾರು 120 ಅಡಿ ದೂರಕ್ಕೆ ಎಳೆದೊಯ್ದಿದ್ದರು.
ಪ್ರಕರಣದ ಅನುಮಾನಾಸ್ಪದವಾಗಿ ಕಂಡು ಬಂದಿದ್ದರಿಂದ ಪೊಲೀಸರು ತನಿಖೆ ನಡೆಸಿದ್ದರು. ಆರೋಪಿಗಳ ವಿರುದ್ದ ಅಥಣಿ ಠಾಣೆಯಲ್ಲಿ ಹಲವು ಆರೋಪಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.