ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಳಿ ಅನಾಮಧೇಯ ಮಹಿಳೆ ಶವ ಪತ್ತೆಯಾಗಿರುವ ಪ್ರಕರಣಕ್ಕೆ ತಿರುವು ದೊರೆತಿದೆ. ಮಹಿಳೆಯ ಮೊಬೈಲ್ ಕಾಲ್ ಬೆನ್ನಟ್ಟಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಮೂರು ಮಕ್ಕಳ ತಾಯಿಯಾದ ಮಹಿಳೆ, ಯುವಕನೊಂದಿಗೆ ವಿವಾಹಬಾಹಿರ ಪ್ರೇಮ ಪ್ರಣಯದಲ್ಲಿ ತೊಡಗಿದ್ದು, ಬಳಿಕ ಅದರಿಂದಾಗಿಯೇ ಕೊಲೆಯಾದ ಘಟನೆ ಬಯಲಾಗಿದೆ.
ಅದು 2025 ಏಪ್ರಿಲ್ 23 ರಂದು ಸೂರಣಗಿ ಗ್ರಾಮದ ದೊಡ್ಡೂರ ರಸ್ತೆಯ ಬಯಲು ಬಸವೇಶ್ವರ ದೇವಸ್ಥಾನ ಬಳಿ 35ವರ್ಷದ ಮಹಿಳೆ ಅಪರಿಚಿತ ಶವ ಪತ್ತೆಯಾಗಿತ್ತು.
ಗಾಬರಿಯಾದ ಸೂರಣಗಿ ಗ್ರಾಮಸ್ಥರು ತಕ್ಷಣ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಲಕ್ಷ್ಮೇಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ಮತ್ತು ತಂಡ ಪರಿಶೀಲನೆ ಮಾಡಿತ್ತು. ಆ ವೇಳೆ ಇದು ಸಹಜ ಸಾವಲ್ಲ ಕೊಲೆ ಅನ್ನೋ ಅನುಮಾನ ಮೂಡಿತ್ತು.
ಪ್ರಕರಣದ ತನಿಖೆ ಚುರುಕುಗೊಳಿಸಿದಾಗ, ಕೊಲೆಯಾದ ಮಹಿಳೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ನೇಲೊಗಲ್ ಗ್ರಾಮದ ಲಕ್ಷ್ಮೀ ಇಂಗಳಗಿ ಅಂತ ಗೊತ್ತಾಗಿದೆ.
ಆಗ ಮೃತಳ ಸಹೋದರಿ, ಈಕೆಯ ಸಾವಿನಲ್ಲಿ ಅನುಮಾನ ಇದೆ ಎಂದು ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ಆಕೆಯ ಫೋನ್ನಿಂದ ಸಣ್ಣ ಸುಳಿವು ಸಿಕ್ಕಿತ್ತು. ಅದೇ ಸುಳಿವಿನ ಮೇರೆ ತನಿಖೆ ನಡೆಸಿದ ಪೊಲೀಸರಿಗೆ ಹಂತಕನ ಇತಿಹಾಸವೇ ಸಿಕ್ಕಿದೆ.
ಯುವಕನಿಗೆ ಹಣಕ್ಕಾಗಿ ಬ್ಲ್ಯಾಕ್ಮೇಲ್
ಕೊಲೆಯಾದ ಲಕ್ಷ್ಮೀಗೆ ಮೂವರು ಮಕ್ಕಳಿದ್ದಾರೆ. ಆದರೆ ಗಂಡನಿಂದ ಲಕ್ಷ್ಮೀ ದೂರವಾಗಿದ್ದಳು. ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಆ ವೇಳೆಯಲ್ಲಿ ಹಾವೇರಿ ಜಿಲ್ಲೆಯ ಸುನಿಲ್ ಎನ್ನುವ ಹದಿಹರೆಯದ ಯುವಕ ಪರಿಚಯವಾಗಿದ್ದ ಇಬ್ಬರ ನಡುವೆ ಲವ್ ಆಗಿದ್ದು, ದೈಹಿಕ ಸಂಬಂಧ ಸಹ ಬೆಳೆದಿತ್ತು.
30 ವರ್ಷದ ಸುನೀಲ್ ಮದುವೆ ಮಾಡಲು ಅವರ ಕುಟುಂಬಸ್ಥರು ತಯಾರಿ ನಡೆಸಿದ್ದರು. ಅದೇ ವೇಳೆ ಲಕ್ಷ್ಮೀ 5 ಲಕ್ಷ ಹಣ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇಲ್ಲವಾದರೆ ನಮ್ಮ ಅನೈತಿಕ ಸಂಬಂಧ ವಿಷಯ ಬಹಿರಂಗ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾಳೆ.
ಲಕ್ಷ್ಮೀಯ ಬ್ಲ್ಯಾಕ್ಮೇಲ್ನಿಂದ ಕಂಗಾಲಾದ ಯುವಕ ಸುನೀಲ್, ಗೆಳೆಯರಾದ ಸಿದ್ದಪ್ಪ, ನಟರಾಜ್, ರಮೇಶ ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ.
ಅದರಂತೆ ಏಪ್ರಿಲ್ 22ರಂದು ಲಕ್ಷ್ಮೀಯನ್ನು ಕಾರಿನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಕೇಬಲ್ ವೈಯರಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ.
ನಂತರ ಮೃತ ದೇಹವನ್ನು ಸೂರಣಗಿ ಬಳಿ ಎಸೆದು ಪರಾರಿಯಾಗಿದ್ದರು. ಪೊಲೀಸರು ಪ್ರಕರಣ ಭೇದಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್, ಕತ್ತು ಹಿಸುಕಲು ಬಳಸಿದ್ದ ಕೇಬಲ್ ವೈರ್ ವಶಕ್ಕೆ ಪಡೆದು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.