ಕಲಘಟಗಿ :ತಾಲೂಕಿನ ಬೆಂಡಲಗಟ್ಟಿ ಗ್ರಾಮದ ರೈತನೊಬ್ಬ ಕಬ್ಬಿನ ಹೊಲಕ್ಕೆ ಹೋದಾಗ ಹಠಾತ್ ಕರಡಿ ದಾಳಿ ಮಾಡಿದ ಪರಿಣಾಮ ರೈತ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಮದ್ಯಾಹ್ನ ಜರುಗಿದೆ.

ಘಟನೆಯಲ್ಲಿ ಬೆಂಡಲಗಟ್ಟಿ ಗ್ರಾಮದ ಶಂಕ್ರಪ್ಪ ಪರಸಪ್ಪ ಲಮಾಣಿ (52) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ರೈತ ಶನಿವಾರ ಬೆಳೆಗ್ಗೆ ತಮ್ಮ ಕಬ್ಬಿನ ಹೊಲಕ್ಕೆ ಕೂಲಿ ಮಾಡಲೆಂದು ಹೋದವೇಳೆ
ಮದ್ಯಾಹ್ನದ ವೇಳೆ ಹಟಾತ್ತನೆ ಕರಡಿ ದಾಳಿ ಮಾಡಿದೆ. ಈ ವೇಳೆ ಗಾಯಗೊಂಡ ರೈತ ಕಿರುಚಾಡುತ್ತಿರುವಾಗ ಘಟನಾ ಸ್ಥಳಕ್ಕೆ ಪಕ್ಕದ ಹೊಲದಲ್ಲಿನ ರೈತರು ಬರುತ್ತಿದ್ದಂತೆ ಕರಡಿ ಅಲ್ಲಿಂದ ಓಡಿ ಹೋಗಿದೆ. ಅಲ್ಲಿಂದ ಆಸ್ಪತ್ರೆಗೆ ಕೊಂಡೋಯ್ಯಬೇಕು ಎನ್ನುವಷ್ಟರಲ್ಲಿಯೇ ರೈತ ಮೃತ ಪಟ್ಟಿದ್ದಾನೆ. ಈ ಕುರಿತು ಸ್ಥಳೀಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿ.ಪಿ.ಐ ಶ್ರೀಶೈಲ ಕೌಜಲಗಿ ಹಾಗೂ ಡಿ.ಎಪ್.ಓ ಅಲೀಮ್ ಸಿದ್ದಿಕಿ, ಆರ್.ಎಪ್ ಓ ಅರುಣಕುಮಾರ ಅಷ್ಠಗಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಡಿ.ಎಪ್ ಓ ಅಲೀಮ್ ಸಿದ್ದಿಕಿ ಮಾತನಾಡಿ, ಕರಡಿ ದಾಳಿಗೆ ರೈತನಿಗೆ ಘಾಯಗಳ ಹೆಚ್ಚಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಬಗ್ಗೆ ತನಿಖೆ ಕೈಗೊಂಡು ಮೃತ ರೈತನ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.


