ನವದೆಹಲಿ: 'ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ. ಕೆಲಸವಿಲ್ಲದೆ ಸೋಷಿಯಲ್ ಮೀಡಿಯಾ, ಆರ್ಟಿಐ ಕಾರ್ಯಕರ್ತರಾಗಿ ಬದಲಾಗಿ ಇಡೀ ವ್ಯವಸ್ಥೆಯ ಮೇಲೆಯೇ ದಾಳಿ ಮಾಡುತ್ತಾರೆ' ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ದೆಹಲಿಯಲ್ಲಿ ಕಪ್ಪು ಕೋಟು ಧರಿಸಿರುವ ಸಾವಿರಾರು ವಕೀಲರ ಪದವಿಗಳೇ ನಕಲಿ ಇರುವ ಶಂಕೆ ವ್ಯಕ್ತಪಡಿಸಿರುವ ಕೋರ್ಟ್, ಈ ಬಗ್ಗೆ ಸಿಬಿಐ (CBI) ತನಿಖೆ ನಡೆಸುವ ಇಂಗಿತ ವ್ಯಕ್ತಪಡಿಸಿದೆ.
ದೆಹಲಿ ಹೈಕೋರ್ಟ್ನಲ್ಲಿ ತಮಗೂ ಹಿರಿಯ ನ್ಯಾಯವಾದಿ (Senior Advocate) ಹುದ್ದೆ ನೀಡಬೇಕು ಎಂದು ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು, ಅರ್ಜಿದಾರ ವಕೀಲನ ಫೇಸ್ಬುಕ್ ಭಾಷೆ ಹಾಗೂ ವೃತ್ತಿಪರ ನಡವಳಿಕೆಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

