ತುರುವೇಕೆರೆ : ಪಟ್ಟಣದ ಮಾಯಸಂದ್ರ ರಸ್ತೆಯ ಜಯಣ್ಣ ಕನ್ವೆಂಷನ್ ಎದುರಿನ ಚರಂಡಿ ಘನತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿದ್ದು, ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು, ವ್ಯಾಪಾರಸ್ಥರು ದುರ್ನಾತದಿಂದ ಬಳಲುವಂತಾಗಿದೆ. ಕೂಡಲೇ ಸ್ಥಳೀಯ ಪಟ್ಟಣ ಪಂಚಾಯ್ತಿ ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು ಎಂದು ವ್ಯಾಪಾರಸ್ಥರಾದ ಉಮೇಶ್ ಆಗ್ರಹಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಯಸಂದ್ರ ರಸ್ತೆ ಮೇಲ್ಭಾಗದಿಂದ ಹರಿಯುವ ನೀರು ಈ ಸ್ಥಳದಲ್ಲಿ ಕಟ್ಟಿಕೊಳ್ಳುತ್ತದೆ. ಎಷ್ಟೇ ಬಾರಿ ಸ್ವಚ್ಛಗೊಳಿಸಿದರೂ ಪುನಃ ಅದೇ ಸಮಸ್ಯೆ ಎದುರಾಗಿದೆ. ಪಟ್ಟಣ ಪಂಚಾಯ್ತಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಈ ಹಿಂದೆ ಇದ್ದ ಪಟ್ಟಣ ಪಂಚಾಯ್ತಿ ಸದಸ್ಯರಿಗೂ ಈ ಬಗ್ಗೆ ತಿಳಿಸಲಾಗಿತ್ತು. ಯಾರೂ ಸಹ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚಿಂತಿಸಲಿಲ್ಲ. ನಾಗರೀಕರು ಮಾತ್ರ ದುರ್ನಾತದಿಂದ ಬಳಲುವಂತಾಗಿದೆ. ಘನತ್ಯಾಜ್ಯಗಳಿಂದ ಚರಂಡಿ ತುಂಬಿ, ನೀರು ರಸ್ತೆಗೆ ಹರಿಯುತ್ತಿದೆ. ಇದೇ ಕೊಳಚೆಯ ಮೇಲೆ ನಾಗರೀಕರು ನಡೆಯಬೇಕಿದೆ. ಅಲ್ಲದೆ ಸೊಳ್ಳೆಗಳ ಕಾಟ ಅಧಿಕವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ ಎಂದರು.
ಚರಂಡಿ ನೀರು ಜಯಣ್ಣ ಕನ್ವೆಂಷನ್ ಎದುರಿನಲ್ಲಿ ಕಟ್ಟಿಕೊಳ್ಳುತ್ತಿದ್ದು, ಮುಂದೆ ಚರಂಡಿಗೆ ದೊಡ್ಡ ಮರಗಳ ಬೇರು ಹಾಗೂ ಸಿಮೆಂಟ್ ಕಾಂಕ್ರಿಟ್ ಬಿದ್ದು ಚರಂಡಿ ನೀರು ಮುಂದೆ ಹರಿಯದಂತೆ ಆಗಿದೆ. ಪಟ್ಟಣ ಪಂಚಾಯ್ತಿ ಚರಂಡಿಗೆ ಹರಡಿಕೊಂಡಿರುವ ಬೇರುಗಳನ್ನು ಕತ್ತರಿಸಬೇಕು, ಸಿಮೆಂಟ್ ಕಾಂಕ್ರಿಟ್ ಅನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಕಂದಾಯ ಮಾತ್ರ ಸರಿಯಾದ ಸಮಯಕ್ಕೆ ಕಟ್ಟಿಸಿಕೊಳ್ಳುವ ಪಟ್ಟಣ ಪಂಚಾಯ್ತಿಗೆ ನಾಗರೀಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ದೂರಿದರು.
ಭೈರವೇಶ್ವರ ಪ್ರಿಂಟರ್ಸ್ ಮಾಲೀಕರ ಕಲ್ಲೇಶ್ ಮಾತನಾಡಿ, ನಮ್ಮ ಅಂಗಡಿ ಎದುರು ಕಾಂಕ್ರಿಟ್ ಚರಂಡಿ ನಿರ್ಮಿಸಲಾಗಿದ್ದು, ಚರಂಡಿ ಮೇಲೆ ಸ್ಲಾಬ್ ಹಾಕಲಾಗಿದೆ. ಇದರಿಂದ ಚರಂಡಿ ಸ್ವಚ್ಛಗೊಳಿಸಲಾಗದೆ ಚರಂಡಿ ತ್ಯಾಜ್ಯ ವಸ್ತುಗಳಿಂದ ತುಂಬಿ ದುರ್ನಾತ ಬರುತ್ತಿದೆ. ಅಲ್ಲದೆ ಚರಂಡಿಯ ಪಕ್ಕದಲ್ಲಿ ಬಹಳ ವರ್ಷದ ಹಳೆಯ ಮರವಿದ್ದು, ಅದರ ಬೇರು ಚರಂಡಿಯೊಳಗೆ ಹರಡಿ ನೀರು ತ್ಯಾಜ್ಯ ವಸ್ತು ಮುಂದೆ ಹೋಗದಂತೆ ತಡೆದಿದೆ. ಚರಂಡಿ ಸ್ಲಾಬ್ ತೆಗೆದು, ಮರದ ಬೇರನ್ನು ಕತ್ತರಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕ ಎಲ್ಲರಿಗೂ ಹತ್ತಾರು ಬಾರಿ ಕೇಳಿಕೊಳ್ಳಲಾಗಿದೆ. ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಚರಂಡಿಯ ನೀರಿನ ತೇವಾಂಶ ಅಂಗಡಿಯೊಳಗೆ ಬಂದು ಅಂಗಡಿಯ ವಸ್ತುಗಳು ಹಾಳಾಗುತ್ತಿದೆ. ಮಳೆ ಬಂದಾಗಲಂತೂ ನಮ್ಮ ಪರಿಸ್ಥಿತಿ ದೇವರಿಗೆ ಪ್ರೀತಿ. ಚರಂಡಿ ತುಂಬಿ ನೀರು ಅಂಗಡಿಯೊಳಗೆ ಹರಿಯುತ್ತದೆ ಎಂದು ನೋವನ್ನು ತೋಡಿಕೊಂಡರು.
ಕೂಡಲೇ ಪಟ್ಟಣ ಪಂಚಾಯ್ತಿ ಮಾಯಸಂದ್ರ ರಸ್ತೆಯ ಜಯಣ್ಣ ಕನ್ವೆಂಷನ್ ಮುಂದಿನ ಹಾಗೂ ಎದುರಿನ ಅಂಗಡಿ ಮಳಿಗೆಗಳ ಬಳಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ ನಾಗರೀಕರು ಯಾವುದೇ ರೋಗ ಭಯದ ಆತಂಕವಿಲ್ಲದೆ ಬದುಕುವಂತೆ ಮಾಡಬೇಕೆಂದು ನಾಗರೀಕರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬ್ಯಾಟಪ್ಪ, ರಂಗಣ್ಣ, ರಫಿವುಲ್ಲಾಖಾನ್, ಕುಮಾರ್, ಗಂಗಾಧರ್, ನಾಗರಾಜ್, ರಿಜ್ವಾನ್ ಖಾನ್, ರಿಹಾನ್ ಮುಂತಾದವರಿದ್ದರು.
ವರದಿ : ಗಿರೀಶ್ ಕೆ ಭಟ್

