ತುರುವೇಕೆರೆ : ನಾಡಪ್ರಭು ಕೆಂಪೇಗೌಡರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ, ಸರ್ವ ಸಮುದಾಯದ ಅಭಿವೃದ್ದಿಗೆ ಕಂಕಣಬದ್ಧರಾಗಿ ದುಡಿದ ಸಾಮಾಜಿಕ ನ್ಯಾಯದ ಹರಿಕಾರ, ಮಹಾನ್ ಚೇತನ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲೂಕು ಆಡಳಿತ, ಒಕ್ಕಲಿಗರ ಸಂಘ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತ್ಯೋತ್ಸವವ ಮತ್ತು ಒಕ್ಕಲಿಗರ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡದೇ ಹೋಗಿದ್ದರೆ ಇಂದು ಧಾರವಾಢ ಅಥವಾ ದಾವಣೆಗೆರೆ ರಾಜಧಾನಿಯಾಗಿ ನಾವೆಲ್ಲರೂ ಆ ಭಾಗದ ಕಡೆ ಮುಖ ಮಾಡಬೇಕಿತ್ತು. ಬೆಂಗಳೂರು ನಿರ್ಮಾಣ ಮಾಡಿದ ಕಾರಣ ಇಂದು ಬೆಂಗಳೂರು ನಮ್ಮ ಕರ್ನಾಟಕದ ರಾಜಧಾನಿಯಾಗಿ ನಾವೆಲ್ಲರೂ ಈ ಭಾಗದಲ್ಲಿ ಉಳಿಯಲು ಸಾಧ್ಯವಾಗಿದೆ. ಕೆಂಪೇಗೌಡರು ತಮ್ಮ ಆಡಳಿತಾವಧಿಯಲ್ಲಿ ಬೆಂಗಳೂರನ್ನು ಸ್ಥಾಪಿಸಿ ಎಲ್ಲಾ ಸಮುದಾಯದ ವೃತ್ತಿಪರರ ಅಭಿವೃದ್ದಿಗಾಗಿ 54 ಪೇಟೆಗಳನ್ನು ಸ್ಥಾಪಿಸಿದರು. ಕೃಷಿಕರ ಅಭಿವೃದ್ದಿಗಾಗಿ ಸಾವಿರಾರು ಕೆರೆಗಳನ್ನು ನಿರ್ಮಾಣ ಮಾಡಿದರು. ಆದರೆ ಇಂದು ಸರ್ಕಾರಗಳು ಭೂಮಾಫಿಯಾದವರೊಂದಿಗೆ ಶಾಮೀಲಾಗಿ ಕೆರೆಕಟ್ಟೆಗಳನ್ನು ಮುಚ್ಚಿ ಹಾಕಿರುವುದು ದುರಂತ ಎಂದರು.
ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಬಹಳ ಸಡಗರ, ಸಂಭ್ರಮದಲ್ಲಿ ಜಾನಪದ ಕಲಾತಂಡಗಳ ಸಾಂಸ್ಕೃತಿಕ ವೈಭವದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಒಕ್ಕಲಿಗರ ಸಂಘದ ಅಧ್ಯಕ್ಷ ತ್ಯಾಗರಾಜ್ ಅಧ್ಯಕ್ಷತೆ ವಹಿಸಿದ್ದರು. 2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಹಾಗೂ ಪಿಯುಸಿಯಲ್ಲಿ ಶೇ.97ಕ್ಕೂ ಅದಿಕ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪೂಜ್ಯ ಶ್ರೀಗಳು ಆರ್ಶೀವಚನ ನೀಡಿದರು. ತಹಸೀಲ್ದಾರ್ ಕುಂಇ ಅಹಮದ್, ಸಮುದಾಯದ ಮುಖಂಡರಾದ ವಿಜಯಲಕ್ಷಿö್ಮÃ ವಿಶ್ವೇಶ್ವರಯ್ಯ, ಮಹಲಿಂಗಯ್ಯ, ಎನ್.ಆರ್.ಜಯರಾಮ್, ಡಿ.ಪಿ.ರಾಜು, ಪ್ರಸನ್ನ ಕುಮಾರ್, ಹೆಚ್.ಆರ್.ರಾಮೇಗೌಡ, ವಿಜಯೇಂದ್ರಕುಮಾರ್, ಆನಂದರಾಜು, ರಂಗನಾಥ್ ಸೇರಿದಂತೆ ಸಮುದಾಯದ ಬಾಂದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


