ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಸನ್ 2026-27ನೇ ಸಾಲಿನ ಶಾಲಾ ಸಂಸತ್ ಚುನಾವಣೆ ನಡೆಯಿತು. ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ನೈಜ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ಶಾಲಾ ಚುನಾವಣೆ ಹಮ್ಮಿಕೊಳ್ಳಲಾಗಿತ್ತು. ಒಟ್ಟು 10 ಸ್ಥಾನಗಳಲ್ಲಿ 4 ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಳಿದ 6 ಸ್ಥಾನಗಳಿಗೆ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ನಾಮಪತ್ರ ಸಲ್ಲಿಕೆ, ಪರಿಶೀಲನೆ, ಚಿಹ್ನೆಗಳ ಹಂಚಿಕೆ, ಪ್ರಚಾರ, ಮತದಾನ, ಮತ ಎಣಿಕೆ ಹೀಗೆ ಎಲ್ಲ ಹಂತಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ವಿದ್ಯಾರ್ಥಿಗಳನ್ನೇ ಚುನಾವಣಾ ಸಿಬ್ಬಂದಿಯನ್ನಾಗಿಸಿ ತರಬೇತಿ ನೀಡಿ ಕರ್ತವ್ಯ ನಿರ್ವಹಿಸುವಂತೆ ತಯಾರಿ ಮಾಡಲಾಗಿತ್ತು. ಪಿಆರ್ಒ, ಎಪಿಆರ್ಒ, ಪಿಒ, ಪೋಲಿಸ್, ಮತ ಎಣಿಕೆ ಮೇಲ್ವಿಚಾರಕ, ಚುನಾವಣಾ ಏಜೆಂಟ್ ಹುದ್ದೆಗಳಲ್ಲಿ ಮಕ್ಕಳು ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಶೇ 99 ರಷ್ಟು ಮತದಾನವಾಯಿತು. ಫಲಿತಾಂಶ ಹೊರಬಿದ್ದಂತೆ ಗೆದ್ದ ಮಕ್ಕಳು ಖುಷಿಯಿಂದ ಸಂಭ್ರಮಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿನಾಯಕ ಬಡಿಗೇರ, ಉಪಾಧ್ಯಕ್ಷ ರಮೇಶ ಸೂರ್ಯವಂಶಿ, ಸದಸ್ಯರಾದ ದುಂಡಪ್ಪ ಮಡಿವಾಳರ, ರಾಮಲಿಂಗಪ್ಪ ಮೆಕ್ಕೇದ, ಗ್ರಾಮದ ಹಿರಿಯರಾದ ಬಾಳಪ್ಪ ನಾಗಣ್ಣವರ, ದ್ಯಾಮಪ್ಪ ಜೋಗಿಗುಡ್ಡ ಹಾಗೂ ಶಿಕ್ಷಕರಾದ ಜೆ.ಆರ್. ನರಿ, ಪಿ.ಎಸ್. ಗುರುನಗೌಡರ, ಎಚ್.ವಿ. ಪುರಾಣಿಕ, ಎಸ್.ವಿ. ಬಳಿಗಾರ, ಜಿ.ಬಿ. ತುರಾದಿ, ಎ.ಎಂ. ಬೇಪಾರಿ ಭಾಗಿಯಾಗಿದ್ದರು. ಚುನಾವಣಾಧಿಕಾರಿಯಾಗಿ ಮುಖ್ಯಶಿಕ್ಷಕ ಎನ್ ಆರ್ ಠಕ್ಕಾಯಿ, ಸಹಾಯಕ ಚುನಾವಣಾಧಿಕಾರಿಯಾಗಿ ಸಮಾಜ ವಿಜ್ಞಾನ ಶಿಕ್ಷಕರಾದ ವಿ.ಆಯ್. ಕೋಟಗಾರ ಕಾರ್ಯ ನಿರ್ವಹಿಸಿದರು.
ವರದಿ : ದುಂಡಪ್ಪ ಹೂಲಿ


