ಅರಸಿಕೆರೆ:ಸೋಶಿಯಲ್ ಡೆಮಾಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಮೇ 10ರಿಂದ ಮೇ 25ರವರೆಗೆ ರಾಜ್ಯವ್ಯಾಪಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಅರಸೀಕೆರೆ ವಿಧಾನಸಭಾ ಸಮಿತಿ ವತಿಯಿಂದ ಇಂದು ದಿನಾಂಕ 12 ಮೇ 2026ರಂದು ಸದಸ್ಯತ್ವ ಅಭಿಯಾನಕ್ಕೆ ಭರ್ಜರಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಯುವಕರು, ಸಮಾಜಮುಖಿ ಚಿಂತಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಪಕ್ಷದ ಸಿದ್ಧಾಂತ, ಜನಪರ ಹೋರಾಟಗಳು ಮತ್ತು ಸಾಮಾಜಿಕ ನ್ಯಾಯದ ಪರವಾದ ನಿಲುವುಗಳನ್ನು ಮೆಚ್ಚಿ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಕಾಂಗ್ರೆಸ್ ಮುಖಂಡರಾದ ಇಮ್ತಿಯಾಜ್ ಪಾಶ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆಗೊಂಡು, ಸಮಾಜದ ಶೋಷಿತ ಮತ್ತು ಹಿಂದುಳಿದ ವರ್ಗಗಳ ಪರ ಹೋರಾಟ ನಡೆಸುತ್ತಿರುವ ಎಸ್ಡಿಪಿಐ ಪಕ್ಷದ ಕಾರ್ಯಚಟುವಟಿಕೆಗಳು ತಮ್ಮನ್ನು ಆಕರ್ಷಿಸಿವೆ ಎಂದು ತಿಳಿಸಿದರು. ಜೊತೆಗೆ ಹಲವು ಯುವಕರು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಸದಸ್ಯತ್ವ ಪಡೆದು ಪಕ್ಷದ ಬಲವರ್ಧನೆಗೆ ಕೈಜೋಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಇಮ್ರಾನ್ ಅರೇಹಳ್ಳಿ ಅವರು ಹೊಸ ಸದಸ್ಯರಿಗೆ ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು. ತಮ್ಮ ಭಾಷಣದಲ್ಲಿ ಅವರು, “ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಹಿತದ ರಾಜಕಾರಣವನ್ನು ಬಲಪಡಿಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನವನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಯುವಕರು ಮತ್ತು ಸಾಮಾನ್ಯ ಜನರು ಪಕ್ಷದತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ” ಎಂದು ಹೇಳಿದರು.
ವಿಧಾನಸಭಾ ಅಧ್ಯಕ್ಷರಾದ JK ನದೀಮ್ ಪಾಶ ಅವರು ಮಾತನಾಡಿ, “ಅರಸೀಕೆರೆ ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮನೆಮನೆಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಹಕ್ಕುಗಳಿಗಾಗಿ ಹೋರಾಡುವ ವೇದಿಕೆಯಾಗಿರುವ ಎಸ್ಡಿಪಿಐಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ” ಎಂದು ತಿಳಿಸಿದರು.
ಕಾರ್ಯದರ್ಶಿ ಸೈಯದ್ ಸದ್ದಾಮ್ ಸೇರಿದಂತೆ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸದಸ್ಯತ್ವ ಅಭಿಯಾನ ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮುಂದುವರಿಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ವರದಿ: ರಾಜು

