ಬೆಂಗಳೂರು: ಜನಿವಾರ ಹಾಗೂ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.
ಸಮವಸ್ತ್ರ ವಿಚಾರವಾಗಿ 2022ರ ಆದೇಶ ಹಿಂಪಡೆದು ಹೊಸ ಆದೇಶ ಹೊರಡಿಸಲಾಗಿದೆ. ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಆದೇಶ ಹೊರಡಿಸಲಾಗಿದೆ.ಸಮವಸ್ತ್ರ ನಿಗದಿಪಡಿಸಿ ಕಡ್ಡಾಯಗೊಳಿಸುವುದನ್ನು ಮುಂದುವರೆಸುತಕ್ಕದ್ದು ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳು ನಿಗದಿಪಡಿಸಲಾದ ಸಮವಸ್ತ್ರ ಜೊತೆ ಸಂಕೇತ ಧರಿಸಬಹುದು. ಸೀಮಿತ ಸಾಂಪ್ರದಾಯಿಕ ಮತ್ತು ಪದ್ಧತಿ ಆಧಾರಿತ ಸಂಕೇತ ಧರಿಸಲು ಅನುಮತಿ ನೀಡಲಾಗಿದೆ. ಸಾಂಪ್ರದಾಯಿಕ ಮತ್ತು ಪದ್ಧತಿ ಆಧಾರಿತ ಸಂಕೇತ ಸಮವಸ್ತ್ರಕ್ಕೆ ಪೂರಕವಾಗಿರಬೇಕು. ಸಮವಸ್ತ್ರ ಬದಲಿಸುವ, ಮಾರ್ಪಡಿಸುವ ಅಥವಾ ವಿಫಲಗೊಳಿಸುವಂತಿರಬಾರದು ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ ಅಥವಾ ಟರ್ಬನ್, ಜನಿವಾರ, ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ತಲೆ ವಸ್ತ್ರ ಅಥವಾ ಹಿಜಾಬ್ ಇತರೆ ಯಾವುದೇ ಸ್ವರೂಪದ ಸಾಂಪ್ರದಾಯಿಕ ಸಂಕೇತ ಸೇರಿಸಬಹುದು. ಇವು ಶಿಸ್ತು ಸುರಕ್ಷತೆ ವಿದ್ಯಾರ್ಥಿ ಗುರುತಿಸುವಿಕೆಗೆ ಅಡ್ಡಿಯಾಗಬಾರದು ಎನ್ನಲಾಗಿದೆ.
ಜನಿವಾರ ತೆಗೆಸುವ ವಿಚಾರ ಸಾಕಷ್ಟು ಜನರ ಭಾವನೆಗೆ ಧಕ್ಕೆ ಉಂಟಾಗಿತ್ತು. ಮಕ್ಕಳು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ಆದೇಶ ಆಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ವಸ್ತ್ರ ಧರಿಸುತ್ತಾರೆ.
ಇಲಾಖೆಯ ವ್ಯಾಪ್ತಿಗೆ ಬರುವ ಶಾಲಾ ಕಾಲೇಜುಗಳಲ್ಲಿ ಒಂದು ಕ್ಲಾರಿಟಿ ಇರಬೇಕು ಎನ್ನುವ ಉದ್ದೇಶದಿಂದ ಒಂದರಿಂದ 12ನೇ ತರಗತಿ ಮಕ್ಕಳಿಗೆ ನಿಖರವಾದ ವಸ್ತ್ರ ಸಂಹಿತೆ ನಿಗದಿ ಮಾಡುತ್ತಿದ್ದೇವೆ. ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲು ಇದನ್ನು ಜಾರಿ ಮಾಡಬೇಕೆಂಬ ಉದ್ದೇಶವಿದೆ ಎಂದು ಹೇಳಿದ್ದಾರೆ.
ಸಾಂಪ್ರದಾಯಿಕ ರೀತಿಯಲ್ಲಿ ಹೇಗೆ ಶೈಕ್ಷಣಿಕ ಸಂಸ್ಥೆಗಳಿಗೆ ಹೋಗಬೇಕು ಎನ್ನುವುದು ಈ ಆದೇಶದಲ್ಲಿ ಇದೆ. ಒತ್ತಡದ ಮೇಲೆ ಯಾವ ವಿದ್ಯಾರ್ಥಿ ಕೂಡ ಶಾಲೆಗೆ ಹೋಗಬಾರದು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇದಕ್ಕಾಗಿ ಸಂವಿಧಾನ ಮಾಡಿಲ್ಲ. ಶಾಲೆಗೆ ಹೋಗುವುದಕ್ಕೆ, ಪರೀಕ್ಷೆಗೆ ಹೋಗುವುದಕ್ಕೂ ಈ ಪದ್ಧತಿ ಅನ್ವಯವಾಗುತ್ತದೆ.
ವಸ್ತ್ರ ಸಂಹಿತೆ ಎಂದು ಕರೆಯಲು ಆಗುವುದಿಲ್ಲ. ಸಾಂಪ್ರದಾಯಿಕ ಪದ್ಧತಿ ಎನ್ನಬಹುದು ಎಂದು ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

