ನವದೆಹಲಿ : ಪ್ರತಿ ವರ್ಷದಂತೆ ಈ ವರ್ಷವೂ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೆಹಲಿಯಲ್ಲಿ ಹಮ್ಮಿಕೊಂಡಿತ್ತು.
ಈ ಸಮಾರಂಭದಲ್ಲಿ ಕಳೆದ ವರ್ಷದಲ್ಲಿ ಅಂತರರಾಷ್ಟ್ರೀಯ ಹಾಗೂ ದೇಶಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಟಗಾರರು ಮತ್ತು ಆಟಗಾರ್ತಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಾಗೆಯೇ ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದ ಪುರುಷರ ಹಾಗೂ ಮಹಿಳಾ ತಂಡಗಳನ್ನು ಗೌರವಿಸಲಾಯಿತು. ಇದೇ ವೇಳೆ ಕನ್ನಡಿಗ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಹಾಗೂ ಮಿಥಾಲಿ ರಾಜ್ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಿಸಿಸಿಐ, ಕನ್ನಡಿಗ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಮತ್ತು ಮಿಥಾಲಿ ರಾಜ್ ಅವರಿಗೆ ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆಗಳಿಗಾಗಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತು.
ಮೂವರಿಗೂ ವಿಶೇಷ ಟ್ರೋಫಿ ನೀಡಲಾಯಿತು. ಅದರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಸನ್ಮಾನಿಸಿದ ವಿಡಿಯೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ‘ದಿ ವಾಲ್’ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ರಾಹುಲ್ ದ್ರಾವಿಡ್, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 24,000 ಕ್ಕೂ ಹೆಚ್ಚು ರನ್ ಗಳಿಸಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಬ್ಯಾಟಿಂಗ್ನ ಬೆನ್ನೆಲುಬಾಗಿದ್ದವರು. ಹಾಗೆಯೇ ನಾಯಕನಾಗಿ ಭಾರತವನ್ನು ಅನೇಕ ಸ್ಮರಣೀಯ ವಿಜಯಗಳಿಗೆ ಕರೆದೊಯ್ದವರು.
ನಿವೃತ್ತಿಯ ನಂತರ, ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಮುಖ್ಯಸ್ಥರಾಗಿ ಯುವ ಆಟಗಾರರಿಗೆ ತರಬೇತಿ ನೀಡಿದರು. 2018 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡಕ್ಕೂ ಅವರು ತರಬೇತಿ ನೀಡಿದರು. ಭಾರತೀಯ ಪುರುಷರ ತಂಡದ ಮುಖ್ಯ ತರಬೇತುದಾರರಾಗಿ, ಅವರು 2024 ರ ಟಿ20 ವಿಶ್ವಕಪ್ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.




